ಪತ್ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ , ಪತಿ ಪೊಲೀಸರಿಗೆ ಶರಣು
ಪಶ್ಚಿಮ ಬಂಗಾಳದ ಜಲ್ಪಾಯಿಗುರಿಯಲ್ಲಿ ಕೌಟುಂಬಿಕ ಕಲಹದ ವೇಳೆ ವ್ಯಕ್ತಿಯೊಬ್ಬ ಪತ್ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ತಡೆಯಲು ಬಂದ ತಾಯಿಗೂ ಗಾಯಮಾಡಿ ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.


ಪಶ್ಚಿಮ ಬಂಗಾಳದ : ಜಲ್ಪಾಯಿಗುರಿ ಜಿಲ್ಲೆಯಲ್ಲಿ ಕೌಟುಂಬಿಕ ಕಲಹವೊಂದು ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಹರಿತವಾದ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿದ್ದು, ದಾಳಿಯನ್ನು ತಡೆಯಲು ಬಂದ ತನ್ನ ತಾಯಿಗೂ ಗಾಯಗೊಳಿಸಿದ್ದಾನೆ. ಬಳಿಕ ಕೀಟನಾಶಕ ಸೇವಿಸಿದ ಆರೋಪಿ, ದಾಳಿಗೆ ಬಳಸಿದ್ದ ಚಾಕುವಿನೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಮೃತ ಮಹಿಳೆಯನ್ನು ರುಕ್ಸಾನಾ ಬೇಗಂ ಎಂದು ಗುರುತಿಸಲಾಗಿದೆ. ಆಕೆಯ ಪತಿ ಜಹಂಗೀರ್ ಆಲಂನನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಒಂದು ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಸುಮಾರು 6 ಗಂಟೆಗೆ ರುಕ್ಸಾನಾ ಮತ್ತು ಜಹಂಗೀರ್ ನಡುವೆ ಯಾವುದೋ ವಿಚಾರಕ್ಕೆ ಜಗಳ ಆರಂಭವಾಗಿತ್ತು. ಮಾತಿನ ಚಕಮಕಿ ತೀವ್ರಗೊಂಡ ಬಳಿಕ ಜಹಂಗೀರ್ ಚಾಕು ತೆಗೆದುಕೊಂಡು ಪತ್ನಿಯ ಮೇಲೆ ದಾಳಿ ನಡೆಸಿದ್ದಾನೆ. ಹಲವು ಬಾರಿ ಇರಿತಕ್ಕೊಳಗಾದ ರುಕ್ಸಾನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ತಡೆಯಲು ಬಂದ ತಾಯಿಗೂ ಗಾಯ:ಪತ್ನಿಯ ಮೇಲಿನ ದಾಳಿಯನ್ನು ಕಂಡ ಜಹಂಗೀರ್ನ ತಾಯಿ ಮಧ್ಯಪ್ರವೇಶಿಸಿ ರುಕ್ಸಾನಾಳನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಆರೋಪಿ ತಾಯಿಯ ಮೇಲೂ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಆಕೆಯ ಕಾಲಿಗೆ ತೀವ್ರ ಗಾಯವಾಗಿದ್ದು, ರಕ್ತಸ್ರಾವವಾಗುತ್ತಿದ್ದ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಈ ವೇಳೆ ಮನೆಯೊಳಗಿಂದ ಕೇಳಿಬಂದ ಕಿರುಚಾಟದಿಂದ ಸ್ಥಳೀಯರು ಅಲ್ಲಿಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ರುಕ್ಸಾನಾ ತೀವ್ರ ಗಾಯಗಳಿಂದ ಮೃತಪಟ್ಟಿದ್ದರು. ಬಳಿಕ ಜಹಂಗೀರ್ ಕೀಟನಾಶಕ ಸೇವಿಸಿದ್ದಾನೆ.
ಕೀಟನಾಶಕ ಸೇವಿಸಿದ ನಂತರವೂ ದಾಳಿಗೆ ಬಳಸಿದ್ದ ಚಾಕುವನ್ನು ತನ್ನೊಂದಿಗೆ ತೆಗೆದುಕೊಂಡು ಧೂಪ್ಗುರಿ ಪೊಲೀಸ್ ಠಾಣೆಗೆ ತೆರಳಿದ ಜಹಂಗೀರ್ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ರುಕ್ಸಾನಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಗೊಂಡಿರುವ ಜಹಂಗೀರ್ನ ತಾಯಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರ ಪ್ರಕಾರ, ಜಹಂಗೀರ್ ಮಾದಕ ವಸ್ತುಗಳ ಸೇವನೆಗೆ ಒಳಗಾಗಿದ್ದ ಎನ್ನಲಾಗಿದ್ದು, ಈ ಹಿಂದೆ ಕೂಡ ಮನೆಯವರೊಂದಿಗೆ ಗಲಾಟೆ ಮಾಡುತ್ತಿದ್ದ. ಪತ್ನಿಯ ಮೇಲೆ ಹಲ್ಲೆ ನಡೆಸುವುದರ ಜೊತೆಗೆ ನೆರೆಹೊರೆಯವರಿಗೂ ಬೆದರಿಕೆ ಹಾಕುತ್ತಿದ್ದ ಎಂದು ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೊಲೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದ್ದು, ಜಹಂಗೀರ್ ವಿರುದ್ಧ ವಿವಿಧ ಕಾನೂನು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಳಿಕ ಯಾವುದೇ ಅಹಿತಕರ ಪರಿಸ್ಥಿತಿ ಉಂಟಾಗದಂತೆ ಪ್ರದೇಶದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.


